ಕಾಯಲಾರೆನು ಕೃಷ್ಣ

ಕಾಯಲಾರೆನು ಕೃಷ್ಣ ಕಂಡವರ ಬಾಗಿಲನು
ನಾಯಿಕುನ್ನಿಗಳಂತೆ ಪರರ ಪೀಡಿಸುತ

ಉದಯಕಾಲದಲೆದ್ದು ಸಂಧ್ಯಾವಿಧಿಯ ಬಿಟ್ಟು
ಪದುಮನಾಭನ ಸ್ಮರಣೆ ಮೊದಲಿಲ್ಲದೆ
ಮುದದಿ ನಿನ್ನರ್ಚಿಸದೆ ನರರ ಸದನವ ಪೊಕ್ಕು
ಒದಗಿ ಸೇವೆಯ ಮಾಡಿ ಅವರ ಬಾಗಿಲನು

ಕಲ್ಲ ಕರಗಿಸಬಹುದು , ಹುರಿಗಡಲೆಯೊಳು ಅದರ
ತೈಲವನು ತೆಗೆದಾದರುಣಲುಬಹುದು
ಬಲ್ಲಿದವರ ಮನಸು ಮೆಚ್ಚಿಸಲರಿಯೆನೈ
ಹಲ್ಲು ಕಿರಿಯುತೆ ಹಂಬಲಿಸಿ ಬಾಯಿಬಿಡುತ

ಇಂತು ನಾನಾ ಚಿಂತೆಯಲಿ ನಿನ್ನ ನೆನೆಯದೆ
ಭ್ರಾಂತಿಯೆಂತೆಂಬ ಹೆಬ್ಬಲೆಯೊಳು ಸಿಲುಕಿ
ಅಂತ್ಯವನು ನಾ ಕಾಣೆ ಆದರಿಸುವವರಿಲ್ಲ
ಚಿಂತೆಯ ಬಿಡಿಸಯ್ಯ ಪುರಂದರವಿಠಲ

******************************************************