ಪವಮಾನ ಪವಮಾನ

ಪವಮಾನ ಪವಮಾನ ಜಗದಾ ಪ್ರಾಣಾ
ಸಂಕರುಷಣ ಭವಭಯಾರಣ್ಯ ದಹನ

ಶ್ರವಣವೆ ಮೊದಲಾದ ನವವಿಧ ಭಕುತಿಯ
ತವಕದಿಂದಲಿ ಕೊಡು ಕವಿಗಳ ಪ್ರಿಯ

ಹೇಮ ಕಚ್ಚುಟ ಉಪವೀತ ಧರಿಪ ಮಾರುತ ಕಾಮಾದಿ ವರ್ಗ ರಹಿತ
ವ್ಯೋಮಾದಿ ಸರ್ವವ್ಯಾಪುತ ಸತತ ನಿರ್ಭೀತ ರಾಮಚಂದ್ರನ ನಿಜದೂತ
ಯಾಮ ಯಾಮಕೆ ನಿನ್ನಾರಾಧಿಪುದಕೆ
ಕಾಮಿಪೆ ಎನಗಿದು ನೇಮಿಸಿ ಪ್ರತಿದಿನ
ಈ ಮನಸಿಗೆ ಸುಖಸ್ತೋಮವ ತೋರುತ
ಪಾಮರ ಮತಿಯನು ನೀ ಮಾಣಿಪುದು

ಪವಮಾನ ಪವಮಾನ ಜಗದಾ ಪ್ರಾಣಾ
ಸಂಕರುಷಣ ಭವಭಯಾರಣ್ಯ ದಹನ

ವಜ್ರ ಶರೀರ ಗಂಭೀರ ಮುಕುಟಧರ ದುರ್ಜನವನ ಕುಠಾರ
ನಿರ್ಜರ ಮಣಿದಯಾ ಪಾರ ವಾರ ಉದಾರ ಸಜ್ಜನರಘವ ಪರಿಹಾರ
ಅರ್ಜುನಗೊಲಿದಂದು ಧ್ವಜವಾನಿಸಿ ನಿಂದು
ಮೂರ್ಜಗವರಿವಂತೆ ಗರ್ಜನೆ ಮಾಡಿದಿ
ಹೆಜ್ಜೆ ಹೆಜ್ಜೆಗೆ ನಿನ್ನ ಅಬ್ಜ ಪಾದದ ಧೂಳಿ
ಮಾರ್ಜನದಲಿ ಭವ ವರ್ಜಿತನೆನಿಸೊ

ಪವಮಾನ ಪವಮಾನ ಜಗದಾ ಪ್ರಾಣಾ
ಸಂಕರುಷಣ ಭವಭಯಾರಣ್ಯ ದಹನ

ಪ್ರಾಣ ಅಪಾನ ವ್ಯಾನೋದಾನ ಸಮಾನ ಆನಂದ ಭಾರತಿ ರಮಣ
ನೀನೆ ಶರ್ವಾದಿ ಗೀರ್ವಾಣಾದ್ಯಮರರಿಗೆ ಜ್ಞಾನಧನ ಪಾಲಿಪ ವರೇಣ್ಯ
ನಾನು ನಿರುತದಲಿ ಏನೇನೆಸಗಿದೆ
ಮಾನಸಾದಿ ಕರ್ಮ ನಿನಗೊಪ್ಪಿಸಿದೆನೊ
ಪ್ರಾಣನಾಥ ಸಿರಿವಿಜಯವಿಠಲನ
ಕಾಣಿಸಿ ಕೊಡುವದು ಭಾನು ಪ್ರಕಾಶ

ಪವಮಾನ ಪವಮಾನ ಜಗದಾ ಪ್ರಾಣಾ
ಸಂಕರುಷಣ ಭವಭಯಾರಣ್ಯ ದಹನ


***********************************************